ಸರಣಿ ಕೊಲೆಗಳ ಬಳಿಕ ಮಂಗಳೂರು ಯಥಾಸ್ಥಿತಿ ಮರಳುತ್ತಿದೆ. ಸೂರತ್ಕಲ್ನಲ್ಲಿ ಮೊನ್ನೆ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಫಾಝಿಲ್ ಪ್ರಕರಣದ ತನಿಖೆ ಚುರುಕು ಪಡೆದಿದೆ. ಹತ್ಯೆ ನಡೆದ ಮೂರು ದಿನಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿ 51 ಶಂಕಿತರ ವಿಚಾರಣೆ ನಡೆಸಿದ್ದ ಪೊಲೀಸರು ಕಡೆಗೂ ಓರ್ವನನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆಗೆ ಇಳಿದ ಖಾಕಿ, ಫಾಝಿಲ್ ಹತ್ಯೆಗೆ ಬಳಸಿದ್ದ ವೈಟ್ಬೋರ್ಡ್ ಕಾರಿನ ಮಾಲೀಕ ಅಜಿತ್ ಎಂಬಾತನ ಹೆಡೆಮುರಿ ಕಟ್ಟಿದೆ. ಈ ಹೊತ್ತಲ್ಲೇ ಕಾರ್ಕಳದ ಇನ್ನಾ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಬಿಳಿ ಬಣ್ಣದ ಇಯಾನ್ ಕಾರು ಸಹ ಪತ್ತೆಯಾಗಿದೆ.
ಕಾರಿನ ಮುಂಬದಿ ಸೀಟಿನಲ್ಲಿ ಕಲೆ ಕಂಡುಬಂದಿದೆ. ಒಂದು ಮೈಕ್ರೋ ಸಿಮ್ ವಶಕ್ಕೆ ಪಡೆದಿದ್ದಾರೆ. ಟೋಲ್ನಲ್ಲಿ ಸಿಸಿಟಿವಿ ಕಣ್ಣಿಗೆ ಬೀಳದಿರಲು ಕಾಡುಹಾದಿಯ ಮೂಲಕ ದುಷ್ಕರ್ಮಿಗಳು ಇಲ್ಲಿಗೆ ಬಂದು.. ನಂತ್ರ ಬೇರೊಂದು ವಾಹನದಲ್ಲಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಪೊಲೀಸರು ಕಾರನ್ನು ವಶಕ್ಕೆ ಪಡೆದು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದೆ. ರಸ್ತೆ ಸರಿ ಇರದ ಕಾರಣ ಯಾರೋ ಕಾರು ಬಿಟ್ಟು ಹೋಗಿದ್ದಾರೆ ಎಂದೇ ಗ್ರಾಮಸ್ಥರು ಭಾವಿಸಿದ್ದರು. ಬೆರಳಚ್ಚು ತಜ್ಞರ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಈ ಇಯಾನ್ ಕಾರು ಗ್ಲಿಮ್ಸಿ ಡಿಂಪಲ್ ಡಿಸೋಜಾ ಹೆಸರಿನಲಿದೆ. ಬಾಡಿಗೆಗೆ ಪಡೆದಿದ್ದು ಯಾರು ಎಂಬ ಬಗ್ಗೆ ಈಗ ಪೊಲೀಸರು ತಲಾಶ್ ನಡೆಸಿದ್ದಾರೆ. ಈ ಮಧ್ಯೆ, ಉನ್ನತಮಟ್ಟದ ತನಿಖೆಗೆ ಫಾಝಿಲ್ ತಂದೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್ ಹಾಕ್ತಿದ್ದವರ ವಿರುದ್ಧ ಪೊಲೀಸರು ಐದು ಕೇಸ್ ದಾಖಲಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದ ಮೇಲೆ 8 ತಜ್ಞರು ಕಣ್ಣಿಟ್ಟಿದ್ದು, ಪ್ರಚೋದನಾಕಾರಿ ಪೋಸ್ಟ್ ಹಾಕಿದವರ ಮೇಲೆ ಕೇಸ್ ಫಿಟ್ ಆಗುತ್ತೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
#publictv #bigbulletin